ಗಣೇಶ್ ದಾಮೋದರ್ ಸಾವರ್ಕರ್ ದೇಶಭಕ್ತ ಕುಟುಂಬಕ್ಕೆ ಸೇರಿದವರು. ದೇಶಕ್ಕಾಗಿ ಅವ್ಯಾಹತ ತುಡಿದ ಮಿಡಿದ ಮತ್ತು ಮಡಿದ ವೀರ ಸಾವರ್ಕರ್ ಇವರ ಸಹೋದರ. ದೇಶ ಭಕ್ತಿಯ ವಾತಾವರಣವನ್ನು ಇವರ ಮನೆಯೇ ಸೃಷ್ಟಿಸಿತ್ತು. ಬಾಲ್ಯದಲ್ಲೇ ತಾಯಿ ನೆಲ, ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಅಪಾರವಾದ ಅಭಿಮಾನವನ್ನು ಗಣೇಶ್ ಸಾವರ್ಕರ್ ಬೆಳೆಸಿಕೊಂಡಿದ್ದರು.
ಪರಿಚಯ
ಗಣೇಶ್ ದಾಮೋದರ ಸಾವರ್ಕರ್ ಅವರು ೧೮೭೯ರ ಜೂನ್ ೧೩ ರಂದು ಮಹಾರಾಷ್ಟçದಲ್ಲಿ ಜನಿಸಿದರು. ತಂದೆ ದಾಮೋದರ್ ಸಾವರ್ಕರ್ ತಾಯಿ ಯಶೋಧ. ಮನೆಯಲ್ಲಿ ಹಿರಿಯ ಮಗನಾಗಿ ಜನಿಸಿ ದೇಶ ಪ್ರೇಮದೆಡೆಗೆ ತಮ್ಮ ಒಡ ಹುಟ್ಟಿದವರನ್ನು ಸೆಳೆದವರು. ಗಣೇಶ್ ಸಾವರ್ಕರ್ ಬಹು ಮುಖ್ಯವಾಗಿ ವೀರ ಸಾವರ್ಕರ್ ಅವರೊಳಗೆ ದೇಶ ಭಕ್ತಿಯ ಕಿಡಿ ಹೊತ್ತಿಸಿದವರು. ಅವರೊಬ್ಬ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾಗಿ ಬೆಳೆಯುವುದರಲ್ಲಿ ಇವರ ಮಹತ್ತರದ ಪಾತ್ರವಿದೆ. ತಮ್ಮ ಕಿರಿಯ ಸಹೋದರ ನಾರಾಯಣ ಮತ್ತು ಸಹೋದರಿ ಮೈನಾಬಾಯಿ ಅವರಿಗೂ ಗಣೇಶ್ ನೀತಿಬೋಧಿಸುತ್ತಿದ್ದರು. "ನಮ್ಮ ಇಡೀ ಕುಟುಂಬ ಈ ದೇಶಕ್ಕಾಗಿ ಪ್ರಾಣ ಅರ್ಪಿಸಲು ಸಿದ್ಧ" ಎಂಬುದನ್ನು ಅವರು ನಿರ್ಭೀತಿಯಿಂದ ಹೇಳುತ್ತಿದ್ದರು.
ಗಣೇಶ್ ಸಾವರ್ಕರ್ ಓರ್ವ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ರಾಜಕೀಯ ಚಿಂತಕ, ಮಹತ್ವಾಕಾಂಕ್ಷಿ. ‘ಅಭಿನವ್ ಭಾರತ್ ಸೊಸೈಟಿ' ಎಂಬ ದೇಶಪರ ಸಂಘಟನೆಯ ಸ್ಥಾಪಕ. ಅವರು ಬ್ರಿಟಿಷ್ ಆಡಳಿತವನ್ನು ಕಟುವಾಗಿ ಟೀಕಿಸಿ ಅವರ ಸಾರ್ವಭೌಮತ್ವವನ್ನು ವಿರೋಧಿಸಿ ಜೀವಾವಧಿ ಶಿಕ್ಷೆಗೆ ಒಳಗಾದವರು. ತಾಯಿ ನೆಲವನ್ನು ಇನ್ನಿಲ್ಲದಂತೆ ಗೌರವಿಸುತ್ತಿದ್ದ ಗಣೇಶ್ ಸಾವರ್ಕರ್ ಮಹಾರಾಷ್ಟçದಿಂದ ಗಡಿಪಾರು ಕೂಡ ಆಗಿದ್ದರು. ದೇಶದ ವಿಚಾರಕ್ಕೆ ಬಂದಾಗ ಅವರು ಯಾವುದಕ್ಕೂ ಎದೆಗುಂದಿದವರಲ್ಲ. ಪೆಟ್ಟು ತಿಂದಷ್ಟೂ ಸೆಟೆದು ನಿಲ್ಲುತ್ತಿದ್ದರು. ಇಂದು ಅತೀ ದೊಡ್ಡ ರಾಷ್ಟಿçÃಯ ಸಂಘಟನೆಯಾಗಿ ಹೆಸರುಗಳಿಸಿರುವ ಮತ್ತು ಕೋಟ್ಯಾಂತರ ಕಾರ್ಯಕರ್ತರನ್ನು ಹೊಂದಿರುವ ಆರ್ ಎಸ್ ಎಸ್ ಕನಸಿನ ಬೀಜವನ್ನು ಬಿತ್ತಿದವರಲ್ಲಿ ಗಣೇಶ್ ಸಾವರ್ಕರ್ ಕೂಡ ಒಬ್ಬರು. ಸಂಘ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೇವಾರ್ ಜತೆಗೆ ಸೇರಿ ಆರ್ಎಸ್ಎಸ್ ಅನ್ನು ದೇಶದಾದ್ಯಂತ ವಿಸ್ತರಿಸಲು ಶ್ರಮಪಟ್ಟವರು.
ಅಭಿನವ್ ಭಾರತ್ ಸೊಸೈಟಿ
ಗಣೇಶ್ ದಾಮೋದರ ಸಾವರ್ಕರ್ ಅವರು ೧೯೦೪ರಂದು ನಾಸಿಕ್ನಲ್ಲಿ ಅಭಿನವ್ ಭಾರತ್ ಸೊಸೈಟಿಯನ್ನು ಹುಟ್ಟು ಹಾಕಿದರು. ಅಣ್ಣ ಹುಟ್ಟು ಹಾಕಿದ ಸಂಘಟನೆ ವೀರ ಸಾವರ್ಕರ್ ಅವರಿಗೆ ಪ್ರೇರಣೆಯಾಯಿತು. ನೂರಾರು ಕ್ರಾಂತಿಕಾರಿಗಳು ಮತ್ತು ರಾಜಕೀಯ ಕಾರ್ಯಕರ್ತರನ್ನು ಈ ಸಂಘಟನೆಯು ಬೆಳೆಸಿತು. ಈ ದೇಶದ ಹಲವಾರು ಕ್ರಾಂತಿಕಾರಿ ಹೋರಾಟಗಾರರಿಗೆ ಅಭಿನವ್ ಭಾರತ್ (ಮಿತ್ರಮೇಳ) ತವರು ಮನೆ ಅಥವಾ ಗರಡಿಮನೆ. ದೇಶದ ಬಗೆಗಿನ ಮಹತ್ವದ ಚರ್ಚೆಗಳು ಅಭಿನವ್ ಭಾರತ್ ಸಭೆಯಲ್ಲಿ ನಡೆಯುತ್ತಿದ್ದವು. ಬ್ರಿಟಿಷ್ ಸಾಮ್ರಾಜ್ಯದ ನಾಶಕ್ಕೆ ಅಂತಲೇ ಈ ಸಂಘಟನೆ ದುಡಿಯುತ್ತಿತ್ತು.
ಗಣೇಶ್ ಸಾವರ್ಕರ್ ತಾವು ಇರುವ ಗಳಿಗೆಯವರೆಗೂ ದೇಶದ ಬಗೆಗೆ ಅತೀವ ಆಸೆ ಕನಸುಗಳನ್ನು ಇಟ್ಟುಕೊಂಡಿದ್ದವರು. ಅವರು ೧೯೪೫ರ ಮಾರ್ಚ್ ೧೬ ರಂದು ತೀರಿಕೊಂಡರು. ವಿಪರ್ಯಾಸವೆಂದರೆ ಒಬ್ಬ ಸಾಹಸಿ ಸ್ವಾತಂತ್ರ್ಯ ಹೋರಾಟಗಾರನೊಬ್ಬ ದೇಶದ ಇತಿಹಾಸದ ಪುಟಗಳಲ್ಲಿ ಮಾಯವಾದರು. ಗಣೇಶ್ ಸಾವರ್ಕರ್ ಅಂತಹ ವ್ಯಕ್ತಿಯನ್ನು ಬಹುಕಾಲ ನೆನಪಿಡಬೇಕಿದೆ. ಅವರನ್ನು ತಲೆಮಾರುಗಳಿಗೆ ತಲುಪಿಸಬೇಕಿದೆ. ಸುನಿತಾ ದೇಶಪಾಂಡೆ ಮತ್ತು ಇನ್ನಿತರ ಲೇಖಕರು ಬರೆದಿರುವ ಗಣೇಶ ದಾಮೋದರ್ ಸಾವರ್ಕರ್ ಜೀವನ ಚರಿತ್ರೆಯನ್ನು ಓದಿದರೆ ಅವರೆಂಥ ಅಸಾಮಾನ್ಯ ವ್ಯಕ್ತಿ ಎಂಬುದು ತಿಳಿಯುತ್ತದೆ.