ಪ್ರತಿಯೊಂದು ಪಯಣವು ತನ್ನ ಉದ್ದೇಶಿತ ತಾಣವನ್ನು ಸೇರುವ ಮೂಲಕ ಕೊನೆಗೊಳ್ಳಬೇಕು ಎಂಬ ನಿಯಮವೇನೂ ಇಲ್ಲ, ಕೆಲವು ಪಯಣಗಳು ಅಪೂರ್ಣವಾಗಿಯೇ ಉಳಿದು ಬಿಡುತ್ತವೆ. 12 ನವೆಂಬರ್ 1996 ರ ಸಂಜೆ ಇಂತಹ ಒಂದು ಘಟನೆ ಸಂಭವಿಸಿತು. ಹರಿಯಾಣದ ಚರಖೀ ದಾದರೀ ಜಿಲ್ಲೆಯು ಒಂದು ಭೀಕರ ಅಪಘಾತಕ್ಕೆ ಸಾಕ್ಷಿಯಾಯಿತು. ಹೃದಯವನ್ನು ನಡುಗಿಸುವ ಆ ಶಬ್ದ, ಭಯಾನಕವಾದ ಮಿಂಚಿನ ಆರ್ಭಟ ಹಾಗೂ ಭಯಂಕರವಾದ ಬೆಂಕಿಯ ಉಂಡೆಗಳ ತೀವ್ರತೆಯು ನೋಡು ನೋಡುತ್ತಿದಂತೆ ಹಳ್ಳಿಯ ಹೊಲ ಗದ್ದೆಗಳ ಮೇಲೆ ಬೀಳಲಾರಂಬಿಸಿದವು. ಅದು ದೆಹಲಿಯಿಂದ ಅರಬ್ ನತ್ತ ಪಯಣಿಸುತ್ತಿದ್ದ ಒಂದು ಯಾತ್ರಿಕರ ವಿಮಾನ ಹಾಗೂ ದೆಹಲಿಯತ್ತ ಬರುತ್ತಿದ್ದ ಕಝಕಿಸ್ತಾನ್ ನ ಸರಕು ವಿಮಾನಗಳ ಅವಶೇಷಗಳಾಗಿತ್ತು. ಈ ಎರಡು ವಿಮಾನಗಳ ಘರ್ಷಣೆಯಾದ ನಂತರ ಭೂಮಿಯ ಮೇಲೆ ಬಿದ್ದ ಇದರ ಮೊನಚಾದ ಭಾಗವು ಭೂಮಿಯಿಂದ 16 ಅಡಿ ಕೆಳಗೆ ಹೂತುಹೋಯಿತು.
ಒಂದೆ ಕ್ಷಣದಲ್ಲಿ ಸೌದಿ ವಿಮಾನದಲ್ಲಿದ್ದ 312 ಜನ ಹಾಗೂ ಕಝಕಿಸ್ಥಾನ ವಿಮಾನದ 37ಜನ ಮೃತ್ಯುವಶವಾಗಿದ್ದರು. ಚರಖಿ ದಾದರೀಯ ಸುತ್ತಮುತ್ತ ನಾಲ್ಕು-ಐದು ಕಿಲೋಮೀಟರ್ ದೂರದ ಢಾಣಿ ಫೌಗಾಟ್, ಖೇಡಿ ಸೋನಾವಾಲ್ ಮತ್ತು ಮಾಲಿಯಾವಾಸ್ ಗ್ರಾಮಗಳ ಗದ್ದೆಗಳಲ್ಲಿ ಸುಟ್ಟು ಕರಕಲಾಗಿ ಚಿಂದಿಯಾಗಿ 351ಶವಗಳು ಬಿದ್ದಿದ್ದವು. ಅಪಘಾತದ ಸುದ್ದಿ ತಿಳಿದ ತಕ್ಷಣ ಸರ್ಕಾರಿ ಸಿಬ್ಬಂದಿಗಳು ಬರುವ ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರು ಸ್ಥಳಕ್ಕೆ ಆಗಮಿಸಿದ್ದರು.
ಛಿದ್ರ ಛಿದ್ರವಾಗಿ ಚದುರಿಹೋಗಿದ್ದ ಶವಗಳ ನಡುವೆ ಬದುಕುಳಿದವರಿಗಾಗಿ ಹುಡುಕಾಡುತ್ತಿದ್ದ ಭಿವಾನಿ ಜಿಲ್ಲೆಯ ಅಂದಿನ ಸಂಘಚಾಲಕರಾದ ಜೀತರಾಮಜೀಯವರು ಸ್ವಯಂಸೇವಕರೊAದಿಗೆ ಅಲ್ಲಿಗೆ ಬಂದು ನೋಡಿದಾಗ ಅವರ ಜೀವವೆ ಬಾಯಿಗೆ ಬಂದಂತಾಗಿತ್ತು. ಒಂದು ಕ್ಷಣವನ್ನೂ ವ್ಯರ್ಥಮಾಡದೆ ಒಂದು ಗಂಟೆಯೊಳಗೆ ಪೆಟ್ರೊಮ್ಯಾಕ್ಸ್ ದೀಪಗಳು, ಜನರೇಟರ್, ನೀರು, ಇತ್ಯಾದಿ ಅಗತ್ಯ ವಸ್ತುಗಳ ವ್ಯವಸ್ಥೆ ಮಾಡಲಾಯಿತು. ಚಳಿಗಾಲದ ಆ ನಿಶ್ಶಬ್ದವಾದ ಕತ್ತಲೆಯಲ್ಲಿ ಒಬ್ಬರು ಇನ್ನೊಬ್ಬರಿಗೆ ಕಾಣದಂತಹ ಸಂದರ್ಭದಲ್ಲಿ ಪೆಟ್ರೊಮ್ಯಾಕ್ಸ್ ದೀಪಗಳ ಬೆಳಕಿನ ಸಹಾಯದಿಂದ ಸ್ವಯಂಸೇವಕರು ಬದುಕುಳಿದವರಿಗಾಗಿ ಹುಡುಕಾಡಲು ಪ್ರಾರಂಭಿಸಿದರು. ಆದರೆ ಕೇವಲ ಇಬ್ಬರೆ ಇಬ್ಬರು ಪ್ರಾಣ ಉಳಿಸಿಕೊಳ್ಳಲು ಹೋರಾಡುತ್ತಿದ್ದವರು ಸಿಕ್ಕಿದ್ದರು. ಆದರೆ ಜೀವನ್ಮರಣದ ಹೋರಾಟದಲ್ಲಿದ್ದ ಅವರನ್ನು ಸ್ಥಳದಲ್ಲಿ ಉಪಸ್ಥಿತರಿದ್ದ ಹೆಡ್ಗೇವಾರ್ ಚಿಕಿತ್ಸಾಲಯದ ತಂಡದವರಿಂದ ಉಳಿಸಿಕೊಳ್ಳಲಾಗಲಿಲ್ಲ.
24 ವರ್ಷಗಳ ಹಿಂದೆ ನೋಡಿದ ಆ ಭಯಾನಕ ದೃಶ್ಯದ ವಿಷಯ ಬಂದ ತಕ್ಷಣ ಅಂದಿನ ಸಂಘಚಾಲಕರಾದ ಶ್ರೀ ಜಿತರಾಮಜೀಯವರು ಇಂದಿಗೂ ಭಾವುಕರಾಗುತ್ತಾರೆ. ಅಲ್ಲಿನ ಸ್ಥಳೀಯ ರೈತರಾದ ಶ್ರೀ ಚಂದ್ರಭಾನ್ ಅವರ ಟ್ರ್ಯಾಕ್ಟರ್ನಲ್ಲಿ ತೀವ್ರವಾಗಿ ಸುಟ್ಟುಹೋಗಿದ್ದ ಶವಗಳನ್ನು ಸ್ವಯಂಸೇವಕರು ಸಾಗಿಸಿದರು. ಶವಗಳು ಕೊಳೆಯದಂತೆ ಕಾಪಾಡಲು ರಾತ್ರಿಯ 11ಗಂಟೆಯ ವೇಳೆಯಲ್ಲಿ ಐಸ್ ಗೆಡ್ಡೆಯ ಕಾರ್ಖಾನೆಯ ಬಾಗಿಲನ್ನು ತೆರೆಸಲಾಯಿತು ಎಂಬುದನ್ನು ಅವರು ನೆನಪಿಸುತ್ತಾರೆ.
ಭಿವಾನಿ, ಝಜ್ಜರ್ ಹಾಗೂ ರೇವಾಡಿಯಂತಹ ಸುತ್ತಮುತ್ತಲಿನ ಪ್ರದೇಶಗಳಿಂದ ಐಸ್ ಸ್ಲಾಬ್ಗಳನ್ನು ತರಸಿಕೊಳ್ಳಲಾಯಿತು. ಸಮಯಕ್ಕೆ ಸರಿಯಾಗಿ ಉಪಸ್ಥಿತರಿದ್ದ ಎಸ್.ಪಿ. ಅವರ ಸಹಾಯದಿಂದ ಶವ ಸಂಸ್ಕಾರಕ್ಕೆ ಬೇಕಾಗುವ ಅವಶ್ಯ ವಸ್ತುಗಳ ಪಟ್ಟಿಯನ್ನು ಮಾಡಲಾಯಿತು. ಹಳ್ಳಿಯ ಜನರ ಸಹಾಯದಿಂದ ಶವ ಸಂಸ್ಕಾರಕ್ಕಾಗಿ ಶವ ಪೆಟ್ಟಿಗೆಯ ವ್ಯವಸ್ಥೆಯನ್ನು ಮಾಡಲಾಯಿತು. ಸಾವನ್ನಪ್ಪಿದ ಪ್ರಯಾಣಿಕರಲ್ಲಿ ಹೆಚ್ಚಿನವರು ಮುಸಲ್ಮಾನರು ಅಥವಾ ಕ್ರಿಶ್ಚಿಯನ್ನರಾಗಿದ್ದರು. ಹಾಗಾಗಿ ಭಿವಾನಿ ಜಿಲ್ಲೆಯ ಸ್ವಯಂಸೇವಕರಾದ ಸಂತರಾಮ್ ಜೀಯವರ ಫ್ಯಾಕ್ಟರಿಯಲ್ಲಿ ಗರಗಸದ ಮಿಶನ್ ನಿಂದ ಶವದ ಪೆಟ್ಟಿಗೆಯನ್ನು ತಯಾರಿಸಲಾಯಿತು.
ಬೆಳಿಗ್ಗೆ 5ಗಂಟೆಯೊಳಗೆ 159 ಶವಗಳನ್ನು ಭಿವಾನಿಯ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಷ್ಟರೊಳಗೆ ಶ್ರೀ ಜೀತಾರಾಮ ಅವರ ನೇತೃತ್ವದಲ್ಲಿ ಸ್ವಯಂಸೇವಕರು ವಿಮಾನ ಅಪಘಾತ ಸಂತ್ರಸ್ತರ ಸಹಾಯ ಸಮಿತಿಯನ್ನು ರಚಿಸಿದ್ದರು. ಇದರಲ್ಲಿ ವಿಶ್ವ ಹಿಂದೂ ಪರಿಷತ್, ಆರ್ಯ ಸಮಾಜ, ವಿದ್ಯಾರ್ಥಿ ಪರಿಷತ್ ಹಾಗೂ ಗುರುದ್ವಾರ ಸಮಿತಿಗಳು ಸೇರಿದಂತೆ ಅನೇಕ ಸಾಮಾಜಿಕ ಸಂಸ್ಥೆಗಳ ಸದಸ್ಯರನ್ನು ಸೇರಿಸಿಕೊಂಡು ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸಿದರು.
ಬೆಳಗಾಗುತ್ತಿದ್ದಂತೆ ಈ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿದ್ದರಿಂದ ಮೃತರ ಸಂಬAಧಿಕರು, ಮಾಧ್ಯಮದವರು, ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದಿದ್ದರು. ಸಮಿತಿಯು ಇವರೆಲ್ಲರಿಗೂ ಪಾನೀಯ ಹಾಗೂ ಭೋಜನ ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಿತು. ಯಾವ ಯಾತ್ರಿಗಳ ಸಂಬAಧಿಕರು ಘಟನೆಯ ಸ್ಥಳಕ್ಕೆ ಬರಲಾಗಲಿಲ್ಲವೊ ಅಂಥಹ ಮೃತ ದೇಹಗಳನ್ನು ಹೂಳುವ ವ್ಯವಸ್ಥೆಯನ್ನು ಸ್ವಯಂಸೇವಕರೇ ಮಾಡಿದರು. ಇದಕ್ಕೆ ಸ್ಥಳಿಯ ಮೌಲ್ವಿ ಹಾಗೂ ದೆಹಲಿಯಿಂದ ಬಂದಿದ್ದ ಇಸ್ಲಾಮಿಯ ಪ್ರತಿನಿಧಿ ಮಂಡಳಿಯ ಸಹಾಯವನ್ನು ತೆಗೆದುಕೊಳ್ಳಲಾಯಿತು.
ಸಮಿತಿಯ ಕಾರ್ಯಕರ್ತರು ಮೂರು ದಿನಗಳ ಕಾಲ ಕಾರ್ಯನಿರ್ವಹಿಸಿದರು. ಸ್ಥಳದಲ್ಲಿ ಉಪಸ್ಥಿತರಿದ್ದ ಅಂದಿನ ಕ್ಷೇತ್ರ ಪ್ರಚಾರಕರಾದ ಶ್ರೀ ಪ್ರೇಮ್ ಗೋಯಲ್ ಅವರ ಪ್ರಕಾರ, ಮೊದಲ ಬಾರಿಗೆ ಮಸೀದಿಯಲ್ಲಿ ಸ್ವಯಂಸೇವಕರನ್ನು ಚರಖಿ ದಾದರಿಯ ಸ್ಥಳಿಯ ಮುಸ್ಲಿಂ ಸಮಾಜವು ಗೌರವಿಸಿತ್ತು.
ಈ ಸಂದರ್ಭದಲ್ಲಿ ಅಲ್ಲಿಯ ಮೌಲ್ವಿಯಾದ ಮೊಹಮ್ಮದ್ ಹಮೀದ್ ಅವರ ಮಾತಿನಲ್ಲಿ ಹೇಳುವುದಾದರೆ, ಅವರು ಸ್ವಯಂಸೇವಕರ ಯೋಗ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಾ “ಸಂಘದ ಸ್ವಯಂಸೇವಕರು ಕೇವಲ ಮಾನವೀಯತೆಯಿಂದ ಕೆಲಸ ಮಾಡುತ್ತಾರೆ” ಎಂದು ಹೇಳಿದರು. ಅಲ್ಲದೆ, ದುರ್ಘಟನೆಯ ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಬಂದ ಅಂದಿನ ಕೇಂದ್ರೀಯ ನಾಗರಿಕ ವಿಮಾನಯಾನ ಸಚಿವ ಶ್ರೀ ಇಬ್ರಾಹಿಂ ಅವರು “ಇವರು ಎಲ್ಲ ಜಾತಿ ಧರ್ಮವನ್ನು ಮೀರಿ ನಿಂತ ಮಾನವತೆಯ ಮೂರ್ತಿಗಳು” ಎಂದು ಸ್ವಯಂಸೇವಕರನ್ನು ಶ್ಲಾಘಿಸಿದರು.