ನಮ್ಮನ್ನು ಅನುಸರಿಸಿ: Facebook Twitter Instagram YouTube

ಆನಂದಧಾಮ ಎಂಬ ಅಕ್ಕರೆಯ ಮನೆ

ಅಪ್‌ಲೋಡ್ ಮಾಡಿದ ದಿನಾಂಕ: 09-12-2025 19:01

ಆನಂದಧಾಮ ಎಂಬ ಅಕ್ಕರೆಯ ಮನೆ
ನಗುವಿನಿಂದ ಪುಟಿದೇಳುತ್ತಿರುವ ಸುಂದರ ನಿಷ್ಕಲ್ಮಶ ಮುಖಗಳು, ಅನುಭವದ ಪರಿಪೂರ್ಣತೆಯಿಂದ ಹೊಳೆಯುತ್ತಿರುವ ಕಣ್ಣುಗಳು. ಇಲ್ಲಿನ ನಿವಾಸಿಗಳ ಪರಿಚಯವನ್ನು ಮಾಡಿಕೊಡುತ್ತವೆ. ಜೀವನೋತ್ಸಾಹದಿಂದ ತುಂಬಿರುವ ಇವರನ್ನು ನೋಡಿದರೆ, ವರ್ಷಾನುಗಟ್ಟಲೆಯಿಂದ ಇವರ ಕುಟುಂಬದವರು ಇವರೊಂದಿಗಿಲ್ಲ ಎಂದು ಊಹಿಸಲೂ ಆಗದಷ್ಟು ಅಚ್ಚರಿಯ ವಾತಾವರಣ. ಇದು ಕಾಣಸಿಗುವುದು ಮಧ್ಯಪ್ರದೇಶದ ರಾಜಧಾನಿ ಭೋಪಾಲದ ಮಧ್ಯದಲ್ಲಿರುವ ಆನಂದಧಾಮ ಹಿರಿಯರ ಜನಸೇವಾ ಕೇಂದ್ರದಲ್ಲಿ. ಮಧ್ಯಪ್ರದೇಶದ ಸೇವಾಭಾರತಿಯ ವತಿಯಿಂದ ನಡೆಸಲಾಗುತ್ತಿರುವ ಈ ಕೇಂದ್ರದಲ್ಲಿ ವಯೋವೃದ್ಧರು ಒಂದು ಕುಟುಂಬದವರಂತೆಯೇ ಆನಂದದಿಂದ ಇದ್ದಾರೆ. ಸಾಮಾಜಿಕ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಸೇವಾಭಾರತಿಯ ಅಂದಿನ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ದೂರದರ್ಶಿತ್ವದಿಂದ ಈ ಕಲ್ಪನೆಯನ್ನು ಹುಟ್ಟು ಹಾಕಲಾಯಿತು. ತುಳಸೀ ರಾಮಾಯಣದಿಂದ ಸೌಖ್ಯಸುಧೆಯು ಹರಿಯುವಂತೆ, ಇಲ್ಲಿ ಶ್ರೀ ರಾಜೇಂದ್ರಪ್ರಸಾದ ಗುಪ್ತಾ ಪರಿವಾರದ ಸಾರಥ್ಯದಲ್ಲಿ ಹದಿನೈದು ವರ್ಷಗಳಿಂದ ಆನಂದದ ಹೊನಲು ಹರಿಯುತ್ತಿದೆ. ಬರಕತಉಲ್ಲಾ ವಿಶ್ವವಿದ್ಯಾಲಯದ ಡೆಪ್ಯುಟಿ ಡೈರೆಕ್ಟರ್ ಪದವಿಯಿಂದ ಸ್ವಯಂನಿವೃತ್ತರಾಗಿರುವ ಗುಪ್ತಾಜೀ ಸಭಾ ಕಾರ್ಯಕ್ರಮಗಳಲ್ಲಿ ತಮ್ಮ ಸ್ವರಚಿತ ಕವಿತೆಗಳನ್ನು ವಾಚಿಸಿ ಎಲ್ಲರ ಮನಸ್ಸನ್ನು ಸೂರೆಗೊಳ್ಳುತ್ತಾರೆ. ಆ ಪರಿಸರದಲ್ಲಿ ಬಡವರ ಮಕ್ಕಳಿಗಾಗಿ ಮೂರು ಹೊತ್ತು ನಡೆಯುವ ತರಬೇತಿ ಸಂಸ್ಥೆಯಲ್ಲಿ ಸಾವಿರದೈನೂರಕ್ಕೂ ಹೆಚ್ಚಿನ ಮಕ್ಕಳು ಅದರ ಲಾಭವನ್ನು ಪಡೆಯುತ್ತಿದ್ದಾರೆ. ೨೦೦೫ರ ಡಿಸೆಂಬರ್ ೧೮ರಂದು ಈ ಕೇಂದ್ರದ ಸ್ಥಾಪನೆಯಾಯಿತು ಎಂದು ಸಂಸ್ಥೆಯ ಮುಖ್ಯಸ್ಥ ಶ್ರೀ ರವೀಂದ್ರ ಸುರಂಗೆ ಹೇಳುತ್ತಾರೆ. ಇಲ್ಲಿ ೧೫ ಮಹಿಳೆಯರು ಮತ್ತು ೧೩ ಪುರುಷರಿದ್ದಾರೆ. ಸಂಸ್ಥೆಯ ವತಿಯಿಂದ ಪರಿಸರದಲ್ಲಿ ಯೋಗ ಕೇಂದ್ರ, ಫಿಸಿಯೋಥೆರಪಿ, ನ್ಯೂರೋಥೆರಪಿ ಕೇಂದ್ರ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಹಾಗೂ ಉಚಿತ ಸಲಹಾ ಕೇಂದ್ರ, ಇವೆಲ್ಲವನ್ನೂ ನಡೆಸಲಾಗುತ್ತಿದೆ. ಇಲ್ಲಿ ಪ್ರತಿದಿನ ಬರುವ ಹೋಮಿಯೋಪತಿ ವೈದ್ಯರು ಆಶ್ರಮವಾಸಿಗಳನ್ನು ಪರೀಕ್ಷಿಸುವುದರ ಜೊತೆಜೊತೆಗೆ ಹೊರ ರೋಗಿಗಳನ್ನೂ ಪರೀಕ್ಷಿಸುತ್ತಾರೆ. ಇಲ್ಲಿನ ಹೊರರೋಗಿ ವಿಭಾಗದಲ್ಲಿ ಪ್ರತಿ ತಿಂಗಳೂ ೫೦೦ಕ್ಕೂ ಹೆಚ್ಚಿನ ರೋಗಿಗಳು ಬಂದು ವೈದ್ಯಕೀಯ ಸೇವೆಯ ಉಪಯೋಗ ಪಡೆಯುತ್ತಾರೆ. ಬೆಳಿಗ್ಗೆ ಯೋಗದಿಂದ ಹಿಡಿದು ಸಂಜೆಯ ಪೂಜೆಯವರೆಗೆ ಒಂದು ವ್ಯವಸ್ಥಿತ ರೀತಿಯ ದಿನಚರಿಯ ಜೊತೆಗೆ, ಇಲ್ಲಿನ ಆಶ್ರಮವಾಸಿಗಳಿಗೆ ಪ್ರತಿದಿನ ೪ರಿಂದ ೬ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸಾಮಾಜಿಕ ಕಳಕಳಿ ಇರುವ ಸೇವಾ ಮನೋಭಾವದ ವ್ಯಕ್ತಿಗಳೂ ಇವರೊಂದಿಗೆ ಸಮಯವನ್ನು ಕಳೆಯುತ್ತಾರೆ. ಕೆಲವರಂತೂ ತಮ್ಮ ಮಕ್ಕಳ ಜನ್ಮದಿನವನ್ನೋ, ಅಥವಾ ಕೆಲ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವವನ್ನೋ, ಈ ವೃದ್ಧರೊಂದಿಗೆ ಆಚರಿಸಿಕೊಳ್ಳುತ್ತಾರೆ. ಆವರಣದಲ್ಲಿ ಮಹಿಳೆ ಹಾಗೂ ಪುರುಷರಿಗೆ ಪ್ರತ್ಯೇಕ ಕೊಠಡಿಗಳಿವೆ. ಜೊತೆಗೆ ಚಿಕಿತ್ಸೆ, ಚಿಂತನೆ, ಸಾಂಸ್ಕೃತಿಕ ಕೊಠಡಿಗಳೂ, ಮಂದಿರ ಹಾಗೂ ಉದ್ಯಾನವನ ಮತ್ತು ಉಪಾಹಾರದ ಕೊಠಡಿಗಳಿದ್ದು, ಒಂದು ಪುಸ್ತಕಾಲಯವೂ ಇದೆ. ತುರ್ತು ಅವಶ್ಯಕತೆಗಳಿಗಾಗಿ ಇಲ್ಲಿ ಒಂದು ಆಂಬ್ಯುಲೆನ್ಸ್ ದಿನದ ೨೪ ಗಂಟೆಗಳ ಕಾಲವೂ ಲಭ್ಯವಿರುತ್ತದೆ. ಈ ಕೇಂದ್ರದ ಪ್ರಾರಂಭದಿಂದಲೂ ಜೊತೆಗಿರುವ ಮತ್ತು ಹಿಂದೆ ಕ್ಷೇತ್ರದ ಸೇವಾ ಪ್ರಮುಖರಾಗಿದ್ದ ಗೋರೆಲಾಲ್, "ಇಲ್ಲಿ ನಾವು ೬೦ ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟವರನ್ನೇ ಸೇರಿಸಿಕೊಳ್ಳುತ್ತೇವೆ. ಅವರ ಅರ್ಜಿ ತುಂಬಿಸುವಾಗ ನಾವು ಅವರ ಕೌಟುಂಬಿಕ ಹಿನ್ನೆಲೆಯನ್ನು, ಪ್ರಸ್ತುತ ಪರಿಸ್ಥಿತಿಯನ್ನೂ ವಿಚಾರಿಸುತ್ತೇವೆ. ನಮ್ಮೊಂದಿಗಿನ ಸಮಾಲೋಚನೆಯಿಂದ ಬಿಕ್ಕಟ್ಟು ದೂರವಾಗಿ ಅವರು ತಮ್ಮ ಮನೆಗೆ ಹಿಂತಿರುಗಲಿ ಎನ್ನುವುದು ನಮ್ಮ ಮೊದಲ ಅಪೇಕ್ಷೆಯಾಗಿರುತ್ತದೆ" ಎನ್ನುತ್ತಾರೆ. ಕೇಂದ್ರದಲ್ಲಿರುವವರನ್ನು ಅವರ ಕುಟುಂಬದ ಸದಸ್ಯರು ಬಂದು ಭೇಟಿ ಮಾಡಲು ಒಂದು ನಿಗದಿತ ಸಮಯವಿರುತ್ತದೆ. ಸೇವಾಭಾರತಿಯ ಪೂರ್ಣಾವಧಿ ಕಾರ್ಯಕರ್ತ ಶ್ರೀ ಕೈಲಾಶ್ ಕುಶಾವಹ್ ಅವರು. "ಇಲ್ಲಿನ ಸಮಾಲೋಚನಾ ಸಮಿತಿಯ ಶ್ರಮದ ಫಲವಾಗಿ ಬಹಳಷ್ಟು ಜನ ತಂತಮ್ಮ ಮನೆಗಳಿಗೆ ಹಿಂತಿರುಗಿದ್ದಾರೆ" ಎನ್ನುತ್ತಾರೆ. ಸ್ವರ್ಗಸ್ಥರಾದ ಮುಕ್ತಾ ಸೆಹಗಲ್ ಅವರಿಗೆ ಯಾರೂ ಇರಲಿಲ್ಲ. ಅವರು ತಮ್ಮ ಮನೆಯಲ್ಲಿ ಬಿದ್ದು ಓಡಾಡಲು ಅಸಮರ್ಥರಾದಾಗ ಸೇವಾಭಾರತಿಯ ಕಾರ್ಯಕರ್ತರು ಅವರ ಚಿಕಿತ್ಸೆ ಹಾಗೂ ಸೇವೆಯನ್ನು ಅವರಿರುವಷ್ಟು ಕಾಲವೂ ನೋಡಿಕೊಂಡರು. ಮುಕ್ತಾಜೀ ಅವರು ತಾವು ದೇಹ ತ್ಯಜಿಸುವ ಮೊದಲು ಅರೇರಾ ಕಾಲೋನಿಯಲ್ಲಿರುವ ತಮ್ಮ ಮನೆಯನ್ನು ಬಡ ಹುಡುಗಿಯರ ವಿದ್ಯಾರ್ಥಿನಿ ನಿಲಯವನ್ನಾಗಿ ಮಾಡಬೇಕೆಂಬ ಇಚ್ಛೆಯಿಂದ ಸೇವಾಭಾರತಿಗೆ ದಾನ ನೀಡಿದರು" ಎಂದು ಹೃದಯ ತುಂಬಿದ ಮನದಿಂದ ನೆನಪಿಸಿಕೊಳ್ಳುತ್ತಾರೆ. ಮುಕ್ತಾಜೀ ಅವರಂತೆಯೇ ಇಲ್ಲಿ ಆನೇಕ ವೃದ್ಧರ ಅಂತಿಮ ವಿಧಿವಿಧಾನಗಳು ಕುಟುಂಬದವರು ಅಪೇಕ್ಷೆಪಟ್ಟಂತೆ ನಡೆಯುತ್ತವೆ. ಇಲ್ಲಿರುವ ಎಲ್ಲರಿಗೂ ಆನಂದಧಾಮವೇ ತಮ್ಮ ಮನೆ ಎನ್ನುವ ಪ್ರೀತಿಯ ಅನುಭೂತಿಯಿದೆ." ೧೫ ವರ್ಷಗಳಿಂದ ಈ ಧಾಮವು ಸರಕಾರದ ಯಾವುದೇ ಸಹಾಯವಿಲ್ಲದೆ, ಸಂಪೂರ್ಣವಾಗಿ ಸಮಾಜಮುಖಿ ಸನ್ಮನಸ್ಸಿನವರ ಬೆಂಬಲದಿAದಲೇ ಸಮರ್ಥವಾಗಿ ಸಾಗುತ್ತಿದೆ" ಎಂದು ಸೇವಾಭಾರತಿಯ ಕ್ಷೇತ್ರ ಸಂಘಟಕರಾದ ಶ್ರೀ ರಾಮೇಂದ್ರಜೀ ಹೇಳುತ್ತಾರೆ. ಸಂಪರ್ಕ - ಶ್ರೀ ರಾಮೇಂದ್ರಜೀ 9425116748
⬅ ಮುಖಪುಟ