ನಮ್ಮನ್ನು ಅನುಸರಿಸಿ: Facebook Twitter Instagram YouTube

ಬಘುವಾರ್ ಎಂಬ ಮಧ್ಯಪ್ರದೇಶದ ಮಾದರಿ ಗ್ರಾಮ

ಅಪ್‌ಲೋಡ್ ಮಾಡಿದ ದಿನಾಂಕ: 09-12-2025 05:15

ಬಘುವಾರ್ ಎಂಬ ಮಧ್ಯಪ್ರದೇಶದ ಮಾದರಿ ಗ್ರಾಮ
ವಾಸ್ತವವಾಗಿ ಭಾರತದ ಅಸ್ತಿತ್ವ ಹಳ್ಳಿಗಳಲ್ಲಿದೆ ಎಂಬುದು ಸತ್ಯವಾದ ಮಾತು. ಒಂದು ವೇಳೆ ನೀವು ಯಾವುದಾದರೂ ಆದರ್ಶ ಗ್ರಾಮವನ್ನು ನೋಡಲು ಬಯಸಿದ್ದರೆ ಮಧ್ಯಪ್ರದೇಶದ ನರಸಿಂಹಪುರ ಜಿಲ್ಲೆಯ ಬಘುವಾರ್ ಹಳ್ಳಿಗೆ ಬನ್ನಿ. ಇಲ್ಲಿ ಸ್ವಚ್ಛವಾದ ರಸ್ತೆಗಳು, ಒಳ ಚರಂಡಿಗಳು, ಪ್ರತೀ ಮನೆಯಲ್ಲೂ ಶೌಚಾಲಯಗಳು, ಆಟವಾಡಲು ಒಳಾಂಗಣ ಕ್ರೀಡಾಂಗಣ ಹಾಗೂ ಅಡುಗೆಗಾಗಿ ಜೈವಿಕ ಅನಿಲ ಸ್ಥಾವರವನ್ನು ನೀವು ಇಲ್ಲಿ ನೋಡಬಹುದು. ಹಲವು ವರ್ಷಗಳಿಂದ ಹಳ್ಳಿಯ ಯಾವುದೇ ವಿವಾದವು ಪೊಲೀಸ್ ಠಾಣೆಯವರೆಗೂ ಬಂದಿಲ್ಲ. ಶಾಲೆ ಹಾಗೂ ಸಮುದಾಯ ಭವನಕ್ಕಾಗಿ ಸರ್ಕಾರ ನೀಡಿದ ಹಣವು ಕಮ್ಮಿಯಾದಾಗ ಬಘುವಾರ್ ಹಳ್ಳಿಯ ಜನರೆ ಹಣವನ್ನು ನೀಡಿದ್ದಲ್ಲದೆ ಶ್ರಮಸೇವೆಯನ್ನೂ ಮಾಡಿದ್ದಾರೆ. ಇವೆಲ್ಲವೂ 50 ವರ್ಷಗಳಿಂದ ನಡೆಯುತ್ತಿರುವ ಸಂಘದ ಶಾಖೆ ಹಾಗೂ ಸ್ವಯಂಸೇವಕರಿಂದ ನಡೆಯುತ್ತಿರುವ ಗ್ರಾಮ ವಿಕಾಸದ ಪ್ರಯತ್ನದ ಪರಿಣಾಮವಾಗಿದೆ. ಸುಮಾರು 25 ವರ್ಷಗಳಿಂದ ಅವಿರೋಧವಾಗಿ ಗ್ರಾಮದ ಸರಪಂಚರಾಗಿರುವ ಠಾಕೂರ್ ಸುರೇಂದ್ರ ಸಿಂಹ, ಠಾಕೂರ್ ಸಂಗ್ರಾಮ್ ಸಿಂಹ ಹಾಗೂ ಹರಿಶಂಕರಲಾಲರAತಹ ಸ್ವಯಂಸೇವಕರು ಅಂದಿನ ಸರಕಾರ್ಯವಾಹರಾದ ಭಾವುರಾವ್ ದೇವರಸರ ಪ್ರೇರಣೆಯಿಂದ ತಮ್ಮ ಹಳ್ಳಿಯನ್ನು ಆದರ್ಶ ಗ್ರಾಮವನ್ನಾಗಿ ಮಾಡಲು ನಿರ್ಧರಿಸಿದರು. 50 ವರ್ಷಗಳಿಂದ ನಿಯಮಿತವಾಗಿ ನಡೆಯುತ್ತಿರುವ ಪ್ರಭಾತ ಫೇರಿ, ಪ್ರತಿ ಮನೆಯ ಗೋಡೆಗಳ ಮೇಲೆ ಬರೆದ ಒಳ್ಳೆಯ ವಿಚಾರಗಳು ಹಾಗೂ ಮಳೆಯ ನೀರನ್ನು ಸಂಗ್ರಹಿಸುವ ಅಭ್ಯಾಸ, ಇವು ಬಘುವಾರನ್ನು ಬೇರೆ ಎಲ್ಲಾ ಹಳ್ಳಿಗಳಿಗಿಂತ ಭಿನ್ನವಾಗಿಸಿದೆ. 1950ರಿಂದ ಬಘುವಾರ್‌ನ ಗ್ರಾಮ ವಿಕಾಸ ಸಮಿತಿಯು ಸಮಗ್ರ ಗ್ರಾಮ ವಿಕಾಸಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಹಳ್ಳಿಯನ್ನು ತಲುಪುವ 3ಕಿ.ಮೀ. ಉದ್ದದ ರಸ್ತೆಯನ್ನು ಇಲ್ಲಿನ ಯುವಕರು ಸೇರಿ ನಿರ್ಮಿಸಿದ್ದಾರೆ. ಕೃಷಿತಜ್ಞ ಹಾಗೂ ಸಂಘದ ತೃತಿಯ ವರ್ಷ ಶಿಕ್ಷಣ ಮುಗಿಸಿರುವ ಸ್ವಯಂಸೇವಕರಾದ ಬಘುವಾರ್ ವಾಸಿಯಾದ ಎಮ್.ಪಿ. ನರೋಲಿಯಾಜೀ ಹೇಳುವಂತೆ ಹಳ್ಳಿಯ ಜನರು ಎಂದಿಗೂ ಅಭಿವೃದ್ಧಿಗಾಗಿ ಸರ್ಕಾರವನ್ನು ಅವಲಂಬಿಸಿಲ್ಲ. ಸರ್ಕಾರದಿಂದ ಪಡೆದ ಹಣಕ್ಕೆ ಹಳ್ಳಿಯವರು 1.5ಲಕ್ಷದಷ್ಟು ಹಣವನ್ನು ಸೇರಿಸಿ ಶಾಲೆಯ ಕಟ್ಟಡವನ್ನು ನಿರ್ಮಿಸಿದರು. ಹಾಗೆಯೆ ಭ್ರಾಮರಿ ನದಿಗೆ ಅಣೆಕಟ್ಟನ್ನು ನಿರ್ಮಿಸಲು 2.5ಲಕ್ಷ ಹಣವನ್ನು ನೀಡಿ ನೀರಿನ ಕೊರತೆಯಿಂದ ಕೃಷಿಗೆ ಆಗುತ್ತಿದ್ದ ತೊಂದರೆಯನ್ನು ಪರಿಹರಿಸಿಕೊಂಡರು. ನಿಯಮಿತವಾದ ಸ್ವಚ್ಛತೆ, ಮನೆಗಳ ಮುಂದೆ ಇಂಗು ಗುಂಡಿ, ಒಳಚರಂಡಿಗಳ ನಿರ್ಮಾಣ, ಮರಗಳನ್ನು ನೆಡುವುದು, ಹಾಗೂ ಇಂದ್ರ ದೇವರ ಕೃಪೆಯಿಂದ ಸುರಿಯುವ ಮಳೆಯ ಪ್ರತಿ ಹನಿಯನ್ನು ಕಾಪಾಡಿ ನೀರಾವರಿಗಾಗಿ ಬಳಸುವುದು ಹಳ್ಳಿಯ ಪ್ರತಿಯೊಬ್ಬರ ಅಭ್ಯಾಸವಾಗಿದೆ. ನೂರಕ್ಕೆ ನೂರಷ್ಟು ಸಾಕ್ಷರತೆ, ಮನೆಗಳ ಗೋಡೆಯ ಮೇಲೆ ಬರೆದ ಪ್ರೇರಣಾದಾಯಕ, ಜ್ಞಾನವರ್ಧಕ ಹಾಗೂ ಸಂಸ್ಕಾರಪೂರ್ಣ ವಾಕ್ಯಗಳು ಮನಸ್ಸಿನ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತವೆ. ಶೇಕಡ 40ರಷ್ಟು ಮನೆಗಳ ಊಟವನ್ನು ಗೋಬರ್ ಗ್ಯಾಸ್ ಬಳಸಿ ತಯಾರಿಸಲಾಗುತ್ತದೆ. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳ ವಿದ್ಯಾಭ್ಯಾಸ ಚೆನ್ನಾಗಿ ನಡೆಯಲು, ಮಕ್ಕಳು ಹಾಗೂ ಶಿಕ್ಷಕರ ಹಾಜರಾತಿ ಸರಿಯಾಗಿ ಇರುವಂತೆ ನೋಡಿಕೊಳ್ಳಲು, ಸಮಿತಿಯ ಸದಸ್ಯರು ಎಲ್ಲಾ ಪ್ರಯತ್ನವನ್ನು ಮಾಡುತ್ತಾರೆ. ಇದೇ ಸರ್ಕಾರಿ ಶಾಲೆಯಲ್ಲಿ ಓದು ಮುಗಿಸಿದ ನರೊಲಿಯಾಜೀ ಕೃಷಿ ಸಂಚಾಲಕರಾದರೆ, ಅವಧೇಶ್ ಶರ್ಮ ಲೆಫ್ಟಿನೆಂಟ್ ಆಗಿದ್ದಾರೆ. ಇಷ್ಟೆ ಅಲ್ಲ ಕೆಲವರು ಡಾಕ್ಟರ್‌ಗಳಾದರೆ, ಮೂವರು ಪಿ ಎಚ್ ಡಿ ಕೂಡಾ ಮಾಡಿದ್ದಾರೆ. ಐಎಎಸ್‌ಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಮೊದಲು ಈ ಹಳ್ಳಿಯನ್ನು ಒಮ್ಮೆ ನೋಡಬೇಕು ಎಂದು ನರಸಿಂಹಪುರದ ಕಲೆಕ್ಟರ್ ಮನೀಶ್ ಸಿಂಹರ ಸಲಹೆಯಂತೆ ವಿದ್ಯಾರ್ಥಿಗಳ ಹಲವು ತಂಡಗಳು ಈ ಹಳ್ಳಿಯನ್ನು ನೋಡಲು ಬಂದಿವೆ. ಸಂಪರ್ಕಿಸಿ: ಶ್ರೀ ಸುಭಾಶ್. ಮೊಬೈಲ್ ನಂ:7697335610
⬅ ಮುಖಪುಟ